ಭರವಸೆಯ ಬದುಕು : ಮನೋಹರ್ ಸಿ ಎಮ್

ಭರವಸೆಯ ಬದುಕು : ಮನೋಹರ್ ಸಿ ಎಮ್

ಈ ಪ್ರಪಂಚವು ಉಗಮವಾದ ಘಳಿಗೆಯಿಂದಲೇ ಪ್ರತಿಯೊಂದು ಜೀವರಾಶಿಯು ತನ್ನ ಅಸ್ತಿತ್ವದ ಉಳಿವಿಗಾಗಿ ಪರಿತಪಿಸುತ್ತಾ ಬದುಕನ್ನು ಸಾಗಿಸುತ್ತಿವೆ. ಇವೆಲ್ಲವುಗಳ ಮಧ್ಯೆ ಮಾನವನ ಜೀವನವು ಉಳಿದೆಲ್ಲಾ ಜೀವರಾಶಿಗಳಿಗಿಂತ ಭಿನ್ನ. ಮಾನವನು ಸಂಘಜೀವಿ ಎಂದು ಹೇಳಿಕೆ ನೀಡಿದ ಅರಿಸ್ಟಾಟಲ್‌ ರವರು ಮಾನವನ ವಿಕಾಸವನ್ನು ಕುರಿತು ಸಾಕಷ್ಟು ಅಧ್ಯಯನ ಕೈಗೊಂಡಿದ್ದರು. ಪರಸ್ಪರ ಆತ್ಮೀಯತೆ, ಸ್ನೇಹ ಮತ್ತು ಪ್ರೀತಿ ವಾತ್ಸಲ್ಯಗಳಿಂದ ಕೂಡಿದ ಸಂವಹನ ಪ್ರತಿಯೊಬ್ಬರಲ್ಲೂ ಸಹ ಒಂದು ಉತ್ತಮ ಬಾಂಧವ್ಯವನ್ನು ರೂಪಿಸಲು ಕಾರಣವಾಗಬಲ್ಲದು. ಇರಲಿ ಇವೆಲ್ಲಾ ವಿಷಯಗಳು ತಮಗೆ ಗೊತ್ತುಂಟು ಹಾಗಾಗಿ ಹೆಚ್ಚಾಗಿ ಪ್ರಸ್ತಾಪಿಸಲ್ಲ.

        ಈ ಮೇಲಿನ ಪಟವನ್ನ ಸೆರೆಹಿಡಿಯುವಾಗ ಅದೆನೋ ಒಂದು ರೀತಿ ಖುಷಿಯಾಗಿತ್ತು. ಕಾರಣ ಬದುಕನ್ನು ಸಾಗಿಸಲು ಪ್ರತಿಯೊಬ್ಬರೂ ಕೂಡ ಏನಾದರೂ ಒಂದು ಕಾಯಕವನ್ನ ಮಾಡಲೇಬೇಕು ಇದು ಸಾರ್ವತ್ರಿಕ. ಆದರೂ ಈ ಪಟದಲ್ಲಿನ ವ್ಯಕ್ತಿಯು ತನ್ನ ಕಾಯಕದ ಜೊತೆಯಲ್ಲಿಯೇ ತನ್ನ ಅರ್ಧಾಂಗಿ ಮತ್ತು ಭವಿಷ್ಯದ ಭರವಸೆಯಾದ ಮಗುವಿನ ಜವಾಬ್ದಾರಿಯನ್ನು ಕೂಡ ಹೊತ್ತು ತನ್ನ ಬೆನ್ನ ಹಿಂದೆಯೇ ರಕ್ಷಿಸುತ್ತಿರುವನು. ಅಷ್ಟುಮಾತ್ರವಲ್ಲ ಆ ಮಗು ತನ್ನ ತಂದೆ ಮತ್ತು ತಾಯಿಯ ಬೆಚ್ಚನೆಯ ರಕ್ಷಾ ಕವಚದಲ್ಲಿ ಸಂತಸದಿಂದ ನಲಿದಾಡುವುದನ್ನ ಕಂಡು ಅವರ ತಂದೆ ಮತ್ತು ತಾಯಿಯು ಅದೆಷ್ಟೋ ನೋವಿನ ಕ್ಷಣಗಳನ್ನು ಮರೆತು ಇನ್ನು ಮುಂದೆಯಾದರೂ ನಮ್ಮ ಮಗುವಿಗಾಗಿ ಸುಂದರ ಬದುಕನ್ನ ನಿರ್ಮಾಣ ಮಾಡಿಕೊಳ್ಳೋಣ ಎಂಬ ಭರವಸೆಯನ್ನ ಮನದಾಳದಲ್ಲಿಯೇ ಚಿಗುರೊಡೆದುಕೊಂಡಂತೆ ಭಾಸವಾಗುತ್ತಿತ್ತು.

      ಹೀಗೆ ಪ್ರಯಾಣವು ಕೇವಲ ಪ್ರಯಾಣಿಸುವವರನ್ನ ಮಾತ್ರವಲ್ಲ ನಮ್ಮ ಬದುಕಿನ ಕ್ಷಣಗಳನ್ನ ಕೂಡ ಒಮ್ಮೆ ಮೆಲುಕು ಹಾಕಿಕೊಳ್ಳುವಂತೆ ಮಾಡಲು ಕಾರಣವಾಗಬಲ್ಲವು. ಪ್ರತಿಯೊಬ್ಬ ಪ್ರಯಾಣಿಕನು ತನ್ನದೇ ನೋವು ನಲಿವುಗಳನ್ನ ಹೊತ್ತಿದ್ದರೂ ಅವುಗಳನ್ನ ಮರೆಮಾಡಲು ಈ ಸಂಚಾರವು ಸುಂದರ ಮಾರ್ಗವಾಗಿದೆ...


Comments

Popular posts from this blog

Varavina Malleshwara temple