ಶ್ರೀಯುತ ವೀರೇಂದ್ರ ರಾವಿಹಾಳ
ಶ್ರೀಯುತ ವೀರೇಂದ್ರ ರಾವಿಹಾಳ ಹಿರಿಗೌಡರ ಮಗನ ಮದುವೆಯ ಮೆರವಣಿಗೆಯು ಅತಿ ವೈಭವದಿಂದ ಸಾಗಿ ಹೊರಟಿತ್ತು. ಹೂವಿನಿಂದ ಅಲಂಕೃತವಾದ ರಥದಲ್ಲಿ ನವದಂಪತಿಗಳು ಯುವರಾಜ-ಯುವರಾಣಿಯರಂತೆ ಕಂಗೊಳಿಸುತ್ತಿದ್ದರು. ರಥದ ಮುಂದೆ ಕಿಕ್ಕಿರಿದ ಭಾರಿ ಜನಸಮೂಹ … ಹಿರಿಗೌಡರ ಸಂಬಂಧಿಗಳು , ಗೆಳೆಯರು , ಪುರಜನರು … ಹೀಗೆ ನಭದಲ್ಲಿ ತಾರೆಗಳ ದಿಬ್ಬಣವೇ ಹೊರಟಂತ್ತಿತ್ತು. ಎಡ-ಬಲದ ಉದ್ದಕ್ಕೂ ದೀಪಾಲಂಕೃತ ಸಾಲುಗಳು ಹಿರಿಗೌಡರ ಮಗನ ಮದುವೆಯ ವೈಭವವನ್ನು ಸಾರಿ ಹೇಳುತ್ತಿದ್ದವು. ಮೆರವಣಿಗೆಯ ಮುಂಚೂಣಿಯಲ್ಲಿ ಬೆಂಗಳೂರು ಬ್ಯಾಂಡ್ನ ಸಿನಿಮಾ ಹಾಡು ಭರ್ಜರಿಯಾಗಿ ಸಾಗಿತ್ತು. ಇಡೀ ಊರಿಗೆ ಇದೊಂದು ಉತ್ಸವವೆನಿಸಿತ್ತು. ಕೆಲವು ಜನ ಇದನ್ನೆಲ್ಲಾ ನೋಡಿದ್ರೆ ಕಾಡಸಿದ್ದಪ್ಪನ ಜಾತ್ರೆ ನೆಪ್ಪಿಗೆ ಬರ್ತೈತೆ ಅಂದ್ರೆ ಇನ್ನೂ ಕೆಲವು ಜನ ಈ ವರ್ಷ ಊರಿನಾಗೆ ಎರಡು ಜಾತ್ರೆ ಎಂದರು. ಇಡೀ ಊರಿಗೆ ಊರೇ ಸಂತೋಷ ಸಂಭ್ರಮ ಸಡಗರಗಳಲ್ಲಿ ಮುಳುಗಿ ಹೋಗಿತ್ತು. ಮೆರವಣಿಗೆಯ ಮಧ್ಯದಲ್ಲಿ ಬಿಳಿವಸ್ತ್ರ ಧರಿಸಿದ್ದ ಹಿರಿಗೌಡರು ತಮ್ಮ ಹುರಿ ಮೀಸೆಯನ್ನು ಇನ್ನಷ್ಟು ಹುರಿ ಮಾಡಿ ರಾಜಠೀವಿಯಿಂದ ಎದೆಯುಬ್ಬಿಸಿ ನಡೆದು ಬರುತ್ತಿದ್ದರು. ಗೌಡರ ಸುತ್ತ ನೆರೆದ ಜನ ಈ ಸೀಮೇಲಿ ಇಂಥಾ ಮದುವೆನ್ನ ನಾವೆಲ್ಲೀ ಕಂಡಿಲ್ಲಾ ಗೌಡ್ರೆ ಎಂದು ಹೊಗಳುಭಟರಂತೆ ಹೊಗಳಿ ಗೌಡರಿಂದ ತಾವೂ ಮೆಚ್ಚುಗೆ ಗಳಿಸಿ ದೇಶಾವರಿ ನಗೆ ಉಕ್ಕಿಸುತ್ತಿದ್ದರು. ಜನರ ಮಾತಿನಿಂದ ಖುಷಿಗೊಂಡ ಗೌಡರು ಮತ್ತೊಮ್...